ರಕ್ಕಸಿ ತರುವ ಅನಾಥ ಸಾವು,
ವೈರಿಗೂ ಬೇಡ ಇಂಥ ನೋವು!
ಸುಳಿವು ಕೊಡದೆ, ಕೈಯ ಹಿಡಿದು,
ಎದೆಯ ಗೂಡು ಸೇರಿದವಳು,
ಮಧುರ ಭಾವ ಅರಿಯದವಳು,
ಬಕಾಸುರನ ಹಸಿವಿನವಳು!
ಎದೆಯ ಹತ್ತಿ ಕುಳಿತಳವಳು,
ಶ್ವಾಸಕೋಶ ಬಗೆದಳು!
ಕತ್ತು ಹಿಸುಕಿ ಕೊಂದಳು,
ಮತ್ತೊಬ್ಬರ ಕೈಯ ಹಿಡಿದಳು!
ಹೊರಲು ಹೆಗಲು ಸಾಲದೇ,
ಹೂಳಲು ಎಡೆಯೇ ಇಲ್ಲದೇ,
ಸುಡಲು ಸೌದೆ ಎಲ್ಲಿದೆ?
ದೇಹಗಳುರುಳಿವೆ ನಿಲ್ಲದೇ!
ಕೊನೆಗೂ ಇಲ್ಲ ದರ್ಶನವು,
ಪ್ರೀತಿಪಾತ್ರ ಬಂಧುಗಳಿಗೆ.
ಸಂಸ್ಕಾರ ಇಲ್ಲ ದೇಹಕೆ,
ಅನಾಥವಾಗಿ ಮಸಣಕೆ.
ಆಸ್ತಿ ಸಿಕ್ಕರೇನು ಬಂತು,
ಸಿಗಲೇ ಇಲ್ಲ ಅಸ್ತಿಯು.
ಕನಸಿನ ಕಥೆಯ ಹಾಗೆ,
ವ್ಯಕ್ತಿ ಮಂಗ ಮಾಯವು!
ಯಾರಿಗೂ ಬೇಡ ಇಂಥ ಗತಿ,
ಬಹುಸಂಕಷ್ಟದ ದುರ್ಗತಿ.
ಬರುವುದೆಂದು ಹತೋಟಿಗೆ?
ಕಾಯುತಿಹೆವು ಬಿಡುಗಡೆಗೆ!