Thursday, April 2, 2020

ನೀನಾಗುವೆ ಬಲಿ!

ಏಕೆ ನಿನಗೆ ಎಲ್ಲದರ ಗೊಡವೆ?
ಈಗ, ಕೈಕಟ್ಟಿ ಕುಳಿತೆಯಲ್ಲ ಮಗುವೆ!

ಗಗನಚುಂಬಿಗಳ ಕಟ್ಟಿ ನೀ ಬೀಗುತಿದ್ದೆ,
ಹಿಮಪರ್ವತಗಳ ಒಮ್ಮೆ ನೋಡು ಪೆದ್ದೆ.
ಹರಿವ ನದಿಗಳಿಗೆ ಕಟ್ಟಿದೆ ಕಟ್ಟೆ,
ಸುನಾಮಿಯ ನೋಡಿ ಹೆದರಿಬಿಟ್ಟೆ!

ಲೋಹದಕ್ಕಿಗಳ ನೀ ಹಾರಿಬಿಟ್ಟೆ,
ಆಗಸದಲಿ ಸಂಚರಿಸುವುದ ಕಲಿತುಬಿಟ್ಟೆ.
ಚಂದ್ರ, ಮಂಗಳಗಳ ತಲುಪಿಬಿಟ್ಟೆ!
ವ್ಯೋಮದಂಗಳದಲಿ ಅದು ಪುಟ್ಟ ಹೆಜ್ಜೆ!

ಹುಲಿ, ಸಿಂಹ, ಆನೆಗಳ ಪಳಗಿಸಿಟ್ಟೆ,
ಕಾಣದ ಕೀಟಗಳ ಕಂಡು ಓಟ ಕಿತ್ತೆ!
ನಿಸರ್ಗವ ಮನಬಂದಂತೆ ಬಳಸಿಬಿಟ್ಟು,
ಬುಡಕೆ ಬಂದರೂ ನೀನು ಬಿಡೆಯ ಪಟ್ಟು?

ಭೂರಮೆಯ ನೀನು ಬರಡಾಗಿಸಿದೆ,
ಗಂಗಾ ಮಾತೆಗೆ ವಿಷವನಿತ್ತೆ,
ಅನಿಲ ದೇವನ ಧೂಮವಾಗಿಸಿದೆ,
ಮಾಡಲು ಇದೆ ಇನ್ನೇನು ಬಾಕಿ?

ನೀ ಪಡೆದು ವರವ, ನೀನಿತ್ತೆ ಜ್ವರವ.
ಪ್ರಕೃತಿ ಮಾತೆ ಸರ್ವಶಕ್ತಳು ತಾನು,
ತನ್ನ ರೋಗವ ಪರಿಹರಿಸಿಕೊಳ್ಳಲು,
ನಿನ್ನ ನಾಶವ ನೆನೆದು ನಿಧಾನಿಸುತಿಹಳು!

ಇನ್ನಾದರೂ ಕಲಿ, ಇನ್ನಾದರೂ ಕಲಿ,
ನಿಸರ್ಗದ ಎದುರಲಿ ನೀನಿನ್ನೂ ಇಲಿ!
ನಿಸರ್ಗ ಮಾತೆಯ ವರವ ಕೇಳು, ಆಕೆ,
ಒಲಿದರೆ ಬಾಳು, ಮುನಿದರೆ ಹಾಳು!

No comments: