Monday, April 6, 2020

ಹೊಸ ನಸುಕು















ಕೊರೋನಾ ನಿನ್ನ ಕರುಣೆ ಅಪಾರ,
ಮನುಜನ ಒಳಿತಿಗೆ ಇಟ್ಟೆ ಶ್ರೀಕಾರ!

ಪತಿಪತ್ನಿಯರ, ಪಿತಸುತರ,
ನಡುವೆ ಇತ್ತು ಅವಾಂತರ.
ಸಂಬಂಧಗಳ ಬೆಸೆಯಲು,
ಕೊಟ್ಟೆ ಹೊಸದೊಂದು ಟಿಸಿಲು!

ವಿಷಭರಿತ ಭೂಜಲ ವಾಯುಗಳು,
ಮತ್ತೊಮ್ಮೆ ಪರಿಶುದ್ಧವಾದುವಲ್ಲ!
ಪ್ರಾಣಿ, ಪಕ್ಷಿಗಳು ಆನಂದದಿಂದ,
ವಿಹರಿಸುವ ಭಾಗ್ಯ ತಂದೆಯಲ್ಲ!

ಮಾನವತೆಯೇ ಕಾಣದ ಕಣ್ಗಳಿಗೆ,
ನಿಲ್ಲದೇ ಓಡುತ್ತಿದ್ದ ಕಾಲ್ಗಳಿಗೆ,
ದುರಾಸೆಯೇ ತುಂಬಿದ್ದ ಮನಗಳಿಗೆ,
ಬದುಕಿನ ನಿಜಭಾಷ್ಯ ತಿಳಿಸಿದೆಯಲ್ಲ!

ನೋಟುಗಳು ಪ್ರಾಣಗಳ ಉಳಿಸುತ್ತಿಲ್ಲ,
ಅಧಿಕಾರದ ಹಮ್ಮು ಉಪಯೋಗಕ್ಕಿಲ್ಲ.
ಹಣದಿಂದಲೇ ಎಲ್ಲ ಎಂದವರನ್ನೂ,
ಹಣತೆ ಹಚ್ಚುವ ಹಾಗೆ ಮಾಡಿದೆಯಲ್ಲ!

ಮುದುಡಿ ಮಲಗಿದ್ದ ಮಾನವೀಯತೆ,
ಮತ್ತೆ ಚಗುರೊಡೆದು ನಗುತಿದೆ!
ಕಳೆದುಹೋಗಿದ್ದ ಸಂಬಂಧಗಳೆಲ್ಲವೂ,
ದೀಪದ ಬೆಳಕಲ್ಲಿ ಕಾಣಿಸಿಕೊಂಡಿವೆ!

ಬಂತೆಲ್ಲಿಂದ ನಿನಗೆ ಈ ಪರಿಯ ಶಕ್ತಿ?
ಮಾನವರನು ಮಣಿಸುವ ಯುಕ್ತಿ!
ಈ ಬದಲಾವಣೆಗಳು ಕ್ಷಣಿಕವಾಗದಿರಲಿ,
ಹೊಸ ನಸುಕಿಗೆ ಮುನ್ನುಡಿಯಾಗಲಿ!







No comments: