Thursday, August 4, 2022

ಮುಕ್ತಕಗಳು - ೩೪

ಹಿತ್ತಾಳೆಗಿವಿಯರಸಗೆ ಚಾರರೂ ಮಂತ್ರಿಗಳು

ತೊತ್ತುಗಳೆ ಆಳುವರು ರಾಜ್ಯವನು ಕೇಳು |

ಬಿತ್ತುವರು ಸಂಶಯವ ಆಲಿಸುವ ಕಿವಿಯಿರಲು

ಸತ್ತಿರದ ಮತಿಯಿರಲಿ ~ ಪರಮಾತ್ಮನೆ ||೧೬೬||


ಹೊತ್ತಲ್ಲದೊತ್ತಿನಲಿ ಉಳಬೇಡ ಉಣಬೇಡ

ಗೊತ್ತುಗುರಿ ಇಲ್ಲದೆಯೆ ಬದುಕುವುದು ಬೇಡ |

ಮತ್ತಿನಲಿ ಮುಳುಗಿಸುವ ವಿಷ ವಿಷಯಗಳು ಬೇಡ

ಚಿತ್ತಚಾಂಚಲ್ಯ ತೊರೆ ~ ಪರಮಾತ್ಮನೆ ||೧೬೭||


ಭೋಗದಲಿ ಆಸಕ್ತಿ, ಕೋಪಗಳು, ಅತಿಯಾಸೆ,

ರಾಗಗಳು, ಗರ್ವ, ಒಡಲಿನನಲವು, ಆರು |

ತೂಗುಗತ್ತಿಗಳು ತಲೆಮೇಲಿರಲು ಬುವಿಯಲ್ಲಿ  

ಸಾಗುವುದು ಸುಲಭವೇ ಪರಮಾತ್ಮನೆ || ೧೬೮||

 

ಇಳೆಯಲ್ಲಿ ಹಗಲಿರುಳು ಕತ್ತಲೆಯ ಸಾಮ್ರಾಜ್ಯ

ಬೆಳಕಿನೆಡೆ ಹೋಗುವಾ ದಾರಿಕಾಣದಿದೆ |

ಒಳಗಿರುವ ಚೈತನ್ಯವನು ಬೇಡು ದಿಕ್ಸೂಚಿ

ತಳಮಳವ ತೊರೆದಿಟ್ಟು ~ ಪರಮಾತ್ಮನೆ ||೧೬೯||


ಜಾಲಿಯಾ ಮರದ ನೆರಳಿನಲಿ ನಿಂತರೆ ಕಷ್ಟ

ಸಾಲದಾ ಸುಳಿಯಲ್ಲಿ ಸಿಲುಕಿದರೆ ನಷ್ಟ |

ಗಾಳದಾ ಮೀನನ್ನು ಹಿಡಿದಿಹುದು ಕಿರುಕೊಕ್ಕಿ

ಜೋಲಿಹೊಡೆದರೆ ಸತ್ತೆ ~ ಪರಮಾತ್ಮನೆ ||೧೭೦||

No comments: