Monday, April 13, 2020

ನಿಮಗೊಂದು ಸಲಾಮ್!


ತಾ ಸಾವೆದು ಗಂಧವೀವ,
ಸಿರಿಗಂಧದ ಕೊರಡು ನೀವು.

ಮನೆ ಮಠಗಳ ಮರೆತುಬಿಟ್ಟು,
ಸತಿ ಸುತರನು ದೂರವಿಟ್ಟು,
ಸೌಖ್ಯವನ್ನೇ ಪಣಕೆ ಇಟ್ಟು,
ನಿಸ್ವಾರ್ಥದ ಸೇವೆ ಕೊಟ್ಟೆ ವೈದ್ಯನಾರಾಯಣ!

ನಿಮ್ಮ ಹೆಗಲಿಗೆ ಹೆಗಲ ಕೊಟ್ಟ,
ಇಚ್ಛೆಗಳ ಅದುಮಿ ಇಟ್ಟ,
ರೋಗಿಗಳಿಗೆ ಅಭಯವಿತ್ತ,
ಸಿಬ್ಬಂದಿಯ ಸೇವೆ, ಚಿತ್ತ, ದೈವಸಹಾಯವು!

ಬಿಸಿಲಿನಲ್ಲಿ ತಿರುಗಿ ತಿರುಗಿ,
ಅಲೆಮಾರಿಗಳ ಹಿಂದಕಟ್ಟಿ,
ಮಾತೆ ಮಕ್ಕಳ ಕಾಪುವಂತೆ
ಎಲ್ಲರನೂ ಕಾಯುತಿರುವ ಪ್ರಾಣ ರಕ್ಷಕರು!

ಬೀದಿ ಹೊಲಸ ಗುಡಿಸಿಕೊಂಡು,
ನಮ್ಮ ಕಸವ ತುಂಬಿಕೊಂಡು,
ನಿಮ್ಮ ಸ್ವಾಸ್ಥ್ಯ ಕಾಯ್ದುಕೊಂಡು,
ಸೇವೆ ಮಾಡುತಿರುವ ನೀವೇ ನಿಜಕೂ ಮಾನ್ಯರು!

ರುಚಿ ಶುಚಿಯ ಪಾಕವಿಳಿಸಿ,
ಹೊಟ್ಟೆಗಿಲ್ಲದವರ ಹುಡುಕಿ,
ಹಸಿದ, ಕುಸಿದ ಪ್ರಾಣಗಳಿಗೆ,
ಅನ್ನಭಾಗ್ಯ ನೀಡುತಿರುವ ನೀವೇ ಧನ್ಯರು!

ನಿಮ್ಮ ಮಹಿಮೆ, ನಿಮ್ಮ ದುಡಿಮೆ,
ಎಷ್ಟು ಹೇಳಿದರೂ ಕಡಿಮೆ.
ನಮಗಿತ್ತಿರಿ ನೀವು ಮುಲಾಮ್‌,
ನಿಮಗೆಲ್ಲರಿಗೆ ನಮ್ಮ ಸಲಾಮ್!

Saturday, April 11, 2020

ಹನುಮ ನೀನೇ ಬರಬೇಕು




ಬೇಕು ಸಂಜೀವಿನಿ ಬೇಕು,
ದಿವ್ಯ ಸಂಜೀವಿನಿ ಬೇಕು.

ಕೀಟ ಕಾಟ ತೊಲಗಿಸುವ,
ಮದ್ದುಸಂಜೀವಿನಿ ಬೇಕು.
ಮೃತ್ಯು ಬಾಧೆ ನೀಗಿಸುವ,
ಪ್ರಾಣಸಂಜೀವಿನಿ ಬೇಕು.

ಧರೆಯು ನಳನಳಿಸಲು,
ನವಸಂಜೀವಿನಿ ಬೇಕು.
ವಿಷಗಾಳಿಯ ಹಿತವಾಗಿಸಲು,
ಅಮೃತಸಂಜೀವಿನಿ ಬೇಕು.

ಮಾತಲಿ ಪ್ರೀತಿ ತುಂಬುವ,
ಪ್ರೇಮಸಂಜೀವಿನಿ ಬೇಕು.
ನೋಟಕ್ಕೆ ಪಾವಿತ್ರ್ಯತೆಯನೀವ,
ದೃಷ್ಟಿಸಂಜೀವಿನಿ ಬೇಕು.

ಸಂಬಂಧಗಳ ಬೆಸೆಯುವ,
ಬಂಧಸಂಜೀವಿನಿ ಬೇಕು.
ಆಸೆಗಳಿಗೆ ಕಡಿವಾಣಕ್ಕೆ,
ಅಂಕೆಸಂಜೀವಿನಿ ಬೇಕು.

ಮನುಜಗೆ ಸದ್ಗುಣಗಳನೀವ,
ಮನೋಸಂಜೀವಿನಿ ಬೇಕು.
ಇವನೆಲ್ಲ ತಂದು ಕೊಡಲು,
ಹನುಮ ನೀನೇ ಬರಬೇಕು!


Monday, April 6, 2020

ಹೊಸ ನಸುಕು















ಕೊರೋನಾ ನಿನ್ನ ಕರುಣೆ ಅಪಾರ,
ಮನುಜನ ಒಳಿತಿಗೆ ಇಟ್ಟೆ ಶ್ರೀಕಾರ!

ಪತಿಪತ್ನಿಯರ, ಪಿತಸುತರ,
ನಡುವೆ ಇತ್ತು ಅವಾಂತರ.
ಸಂಬಂಧಗಳ ಬೆಸೆಯಲು,
ಕೊಟ್ಟೆ ಹೊಸದೊಂದು ಟಿಸಿಲು!

ವಿಷಭರಿತ ಭೂಜಲ ವಾಯುಗಳು,
ಮತ್ತೊಮ್ಮೆ ಪರಿಶುದ್ಧವಾದುವಲ್ಲ!
ಪ್ರಾಣಿ, ಪಕ್ಷಿಗಳು ಆನಂದದಿಂದ,
ವಿಹರಿಸುವ ಭಾಗ್ಯ ತಂದೆಯಲ್ಲ!

ಮಾನವತೆಯೇ ಕಾಣದ ಕಣ್ಗಳಿಗೆ,
ನಿಲ್ಲದೇ ಓಡುತ್ತಿದ್ದ ಕಾಲ್ಗಳಿಗೆ,
ದುರಾಸೆಯೇ ತುಂಬಿದ್ದ ಮನಗಳಿಗೆ,
ಬದುಕಿನ ನಿಜಭಾಷ್ಯ ತಿಳಿಸಿದೆಯಲ್ಲ!

ನೋಟುಗಳು ಪ್ರಾಣಗಳ ಉಳಿಸುತ್ತಿಲ್ಲ,
ಅಧಿಕಾರದ ಹಮ್ಮು ಉಪಯೋಗಕ್ಕಿಲ್ಲ.
ಹಣದಿಂದಲೇ ಎಲ್ಲ ಎಂದವರನ್ನೂ,
ಹಣತೆ ಹಚ್ಚುವ ಹಾಗೆ ಮಾಡಿದೆಯಲ್ಲ!

ಮುದುಡಿ ಮಲಗಿದ್ದ ಮಾನವೀಯತೆ,
ಮತ್ತೆ ಚಗುರೊಡೆದು ನಗುತಿದೆ!
ಕಳೆದುಹೋಗಿದ್ದ ಸಂಬಂಧಗಳೆಲ್ಲವೂ,
ದೀಪದ ಬೆಳಕಲ್ಲಿ ಕಾಣಿಸಿಕೊಂಡಿವೆ!

ಬಂತೆಲ್ಲಿಂದ ನಿನಗೆ ಈ ಪರಿಯ ಶಕ್ತಿ?
ಮಾನವರನು ಮಣಿಸುವ ಯುಕ್ತಿ!
ಈ ಬದಲಾವಣೆಗಳು ಕ್ಷಣಿಕವಾಗದಿರಲಿ,
ಹೊಸ ನಸುಕಿಗೆ ಮುನ್ನುಡಿಯಾಗಲಿ!







Thursday, April 2, 2020

ನೀನಾಗುವೆ ಬಲಿ!

ಏಕೆ ನಿನಗೆ ಎಲ್ಲದರ ಗೊಡವೆ?
ಈಗ, ಕೈಕಟ್ಟಿ ಕುಳಿತೆಯಲ್ಲ ಮಗುವೆ!

ಗಗನಚುಂಬಿಗಳ ಕಟ್ಟಿ ನೀ ಬೀಗುತಿದ್ದೆ,
ಹಿಮಪರ್ವತಗಳ ಒಮ್ಮೆ ನೋಡು ಪೆದ್ದೆ.
ಹರಿವ ನದಿಗಳಿಗೆ ಕಟ್ಟಿದೆ ಕಟ್ಟೆ,
ಸುನಾಮಿಯ ನೋಡಿ ಹೆದರಿಬಿಟ್ಟೆ!

ಲೋಹದಕ್ಕಿಗಳ ನೀ ಹಾರಿಬಿಟ್ಟೆ,
ಆಗಸದಲಿ ಸಂಚರಿಸುವುದ ಕಲಿತುಬಿಟ್ಟೆ.
ಚಂದ್ರ, ಮಂಗಳಗಳ ತಲುಪಿಬಿಟ್ಟೆ!
ವ್ಯೋಮದಂಗಳದಲಿ ಅದು ಪುಟ್ಟ ಹೆಜ್ಜೆ!

ಹುಲಿ, ಸಿಂಹ, ಆನೆಗಳ ಪಳಗಿಸಿಟ್ಟೆ,
ಕಾಣದ ಕೀಟಗಳ ಕಂಡು ಓಟ ಕಿತ್ತೆ!
ನಿಸರ್ಗವ ಮನಬಂದಂತೆ ಬಳಸಿಬಿಟ್ಟು,
ಬುಡಕೆ ಬಂದರೂ ನೀನು ಬಿಡೆಯ ಪಟ್ಟು?

ಭೂರಮೆಯ ನೀನು ಬರಡಾಗಿಸಿದೆ,
ಗಂಗಾ ಮಾತೆಗೆ ವಿಷವನಿತ್ತೆ,
ಅನಿಲ ದೇವನ ಧೂಮವಾಗಿಸಿದೆ,
ಮಾಡಲು ಇದೆ ಇನ್ನೇನು ಬಾಕಿ?

ನೀ ಪಡೆದು ವರವ, ನೀನಿತ್ತೆ ಜ್ವರವ.
ಪ್ರಕೃತಿ ಮಾತೆ ಸರ್ವಶಕ್ತಳು ತಾನು,
ತನ್ನ ರೋಗವ ಪರಿಹರಿಸಿಕೊಳ್ಳಲು,
ನಿನ್ನ ನಾಶವ ನೆನೆದು ನಿಧಾನಿಸುತಿಹಳು!

ಇನ್ನಾದರೂ ಕಲಿ, ಇನ್ನಾದರೂ ಕಲಿ,
ನಿಸರ್ಗದ ಎದುರಲಿ ನೀನಿನ್ನೂ ಇಲಿ!
ನಿಸರ್ಗ ಮಾತೆಯ ವರವ ಕೇಳು, ಆಕೆ,
ಒಲಿದರೆ ಬಾಳು, ಮುನಿದರೆ ಹಾಳು!

Thursday, March 26, 2020

ಏನು ಮಾಡ್ಲಿ ದೇವ್ರೇ

ಕರೋನಾ ಕರೋನಾ ಕರೋನಾ,
ಹೇಗೆ ಕಳೆಯಲಿ ನಾ ಸಮಯಾನಾ!

ಹೊರಗೆ ಹೋದರೆ ಪೋಲೀಸ್‌ ಕಾಟ,
ಮನೇಲೇ ಕುಳಿತರೆ ಹೆಂಡತಿ ಪಾಠ.
ವಾಟ್ಸಾಪ್‌ ನೋಡಿದ್ರೆ ಜ್ವರ ಬರುತ್ತೆ,
ಟಿವಿ ನೋಡಿದ್ರೆ ಹೆದ್ರಿಕೆ ಆಗುತ್ತೆ!

ಕೆಮ್ಮು ಬಂದರೆ ಭಯ ಆಗುತ್ತೆ,
ಸೀನು ಬಂದರೆ ಪ್ರಾಣ ಹೋಗುತ್ತೆ.
ಗುಡಿಯಲಿ ಕೂತು ಬೇಡೋಣಾಂದ್ರೆ,
ಅದಕ್ಕೂ ಇದೆಯಲ್ಲ ತೊಂದ್ರೆ!

ಗೆಳೆಯರು ಮಕ್ಕಳು ಮೊಮ್ಮಕ್ಳೆಲ್ಲ,
ವಿಡಿಯೋದಲ್ಲೇ ಹಾಯ್‌ ಬಾಯೆಲ್ಲ .
ಮುಂಜಾನೆ ಪಾರ್ಕಲಿ ಸುತ್ತಾಟವಿಲ್ಲ,
ಹಾಟ್‌ ಕಾಫಿಯಲಿ ಮೀಟಿಂಗಿಲ್ಲ.

ಪುಸ್ತಕ ಹಿಡಿದರೂ ಓದೋಕಾಗಲ್ಲ,
ಏನೋ ಯೋಚನೆ ಬರುತ್ತಲ್ಲ.
ಮನಸ್ಸಿಗಂತೂ ನೆಮ್ಮದಿಯಿಲ್ಲ,
ಸುಮ್ನೆ ಕೂರೋಕೆ ಆಗ್ತಾ ಇಲ್ಲ.

ಹಾಲು ಪ್ಯಾಕೆಟ್‌ ಮೇಲೇನಿರುತ್ತೋ,
ನ್ಯೂಸ್‌ ಪೇಪರಿಗೆ ಸೋಂಕಾಗಿರುತ್ತೋ,
ತರಕಾರಿ ತರೋದೆ ಬೇಡ ಅನ್ಸುತ್ತೆ,
ತಿಂಗಳ ದಿನಸಿ ಸಾಕಾಗುತ್ತೆ.

ಚೀನಾಲಿ ಯಾರೋ ಏನೋ ತಿಂದ್ರೆ,
ಪ್ರಪಂಚಕೆಲ್ಲ ದೊಡ್ಡ ತೊಂದ್ರೆ!
ಕೈ ತೊಳೆದೂ ತೊಳೆದೂ ಸುಸ್ತಾಯ್ತು,
ಟ್ಯಾಂಕಿನ ನೀರೆಲ್ಲ ಖರ್ಚಾಯ್ತು!

ಮನೇಲೆ ಸ್ವಲ್ಪ ವಾಕಿಂಗ್‌ ಮಾಡ್ದೆ.
ಅಲ್ಲೇ ಸ್ವಲ್ಪ ಜಾಗಿಂಗ್‌ ಮಾಡ್ದೆ.
ಏನು ಮಾಡ್ಲಿ ದೇವ್ರೆ, ಅಯ್ಯೋ!
ಇನ್ನೇನು ಮಾಡ್ಲಿ ದೇವ್ರೆ!

Tuesday, March 24, 2020

ಕೊರೋನಾ ಪುರಾಣ

ಕಣ್ಣಿಗೆ ಕಾಣದ ಕೊರೋನಾ,
ಜಗವನು ಕಾಡಿದ ಪುರಾಣ.

ಹುಟ್ಟಿತು, ಎದ್ದಿತು, ವುಹಾನಿನಲ್ಲಿ,
ಬೆಳೆಸಿತು ಪಯಣ ವಿಮಾನದಲ್ಲಿ.
ಕೆಲವೇ ದಿನಗಳ ವಾಸದಲಿ,
ಹಾಹಾಕಾರವು ಜಗದಲ್ಲಿ.

ಬೆನ್ನನ್ನು ಹತ್ತಿತು ಬೇತಾಳ,
ತಪ್ಪಿತು ಎಲ್ಲರ ಬದುಕಿನ ತಾಳ.
ಹೆದರಿದೆ, ಬೆದರಿದೆ, ಜಗವೆಲ್ಲ,
ಬೇತಾಳನ ಇಳಿಸಲು ತಿಳಿವಿಲ್ಲ.

ಕೈಗಳ ಕುಲುಕಿಗೆ, ಮೈಗಳ ಸನಿಹಕೆ,
ಎಂದೂ ಇಲ್ಲದ ಬಿಗುಮಾನ.
ಕೈಗಳ ಜೋಡಿಸಿ, ನಸುನಗೆ ಸೂಸಿ,
ನಮಿಸಿದರಾಯಿತು ಸಮ್ಮಾನ.

ಶಿಸ್ತು ಮೀರಿದರೆ ಶಿಕ್ಷೆ ತಪ್ಪದು,
ಅತ್ತುಕರೆದರೆ ಏನೂ ಆಗದು!
ಕರುಣೆಯೇ ಇಲ್ಲದ ಕೊರೋನಾ,
ಹೀರಿದೆ ಎಲ್ಲ ಹಿರಿಯರ ಪ್ರಾಣ.

ಹೆಣಗಳು ಉರುಳಿವೆ ಸಾವಿರಗಳಲಿ,
ಮಣ್ಣು ಮಾಡಲು ಎಡೆಯೆಲ್ಲಿ?
ಇಲ್ಲವೇ ಇಲ್ಲ ಕಣ್ಣೀರಿಗೆ ಅಂಕೆ,
ಒರೆಸುವ ಬೆರಳಿಗೂ ಸೋಂಕಿನ ಶಂಕೆ!

ಜಗದ ಪುಪ್ಪಸ ಪುಸ್ಸಾಗಿಸಿತು,
ವೈದ್ಯಕುಲಕೇ ಸವಾಲು ಒಡ್ಡಿತು,
ಆರ್ಥಿಕತೆಯ ಸೊಂಟವ ಮುರಿಯಿತು,
ಬಡಬಗ್ಗರ ಹೊಟ್ಟೆಗೆ ಹೊಡೆಯಿತು!

ಬೀದಿಗೆ ಇಳಿಯಲು ಹೆದರಿದರೆಲ್ಲ,
ಹೆದರಿ ಮನೆಯಲಿ ಅಡಗಿದರಲ್ಲ,
ಯುಗಾದಿಗಿಲ್ಲ ಬೇವು, ಬೆಲ್ಲ!
ಕರೋನಾ ಇದುರು ಯಾರೂ ಇಲ್ಲ!

ರಕ್ತಬೀಜಾಸುರನ ಸಂತತಿಯಂತೆ,
ಹರಡಿದೆ ಜಗದಲಿ ಇದರಾ ಸಂತೆ.
ಕಾದಿಹೆ ಕಾಳಿ ಬರುವಳು ಎಂದೇ,
ಕೊರೋನಾ ಛಿದ್ರವಾಗಲಿ ಇಂದೇ!

Monday, March 9, 2020

ಬಾಳ ಪಯಣ

ಬಾಳ ದೋಣಿಯ ಪಯಣ ಸಾಗಿದೆ,
ಆಳ ಕಡಲಿನ ಮೇಲೆ ತೇಲಿದೆ.

ನೀಲಿ ನೀರಿನ ಕಡಲು ಹರಡಿದೆ,
ತಿಳಿಯ ಬಿಸಿಲಿನ ಕಾವು ಹಿತವಿದೆ.
ತಂಪು ಗಾಳಿಯ ಸೊಂಪು ಸೊಗಡಿಗೆ,
ಮನವು ಮುಗಿಲಿಗೆ ಹಾರಿ ಹೋಗಿದೆ.

ಎಲ್ಲ ಸೊಗಸಿದೆ, ಬೆಲ್ಲ ಸಿಹಿಯಿದೆ,
ಕಣ್ಣು ಮುಚ್ಚಲು ಕನಸು ಹತ್ತಿದೆ.
ಒಂದೇ ಚಣದಲಿ ಮೋಡ ಕವಿದಿದೆ,
ಬಿರುಸು ಗಾಳಿಗೆ ಅಲೆಯು ಎದ್ದಿದೆ.

ಮೋಡ ಗುಡುಗಿದೆ, ದೋಣಿ ನಡುಗಿದೆ,
ಭಯದ ಬೆಂಕಿಯು ಮನವ ಸುಡುತಿದೆ.
ದೋಣಿ ಮುಗುಚಿದೆ, ನೀರ ಸೇರಿದೆ,
ಕೊರೆವ ನೀರಿನ ಚಳಿಯು ಕಚ್ಚಿದೆ.

ನೀರ ಅಲೆಗಳು ಹೊಡೆತ ಕೊಡುತಿವೆ,
ನೆಲೆಯು ಇಲ್ಲದೆ ದೇಹ ಮುಳುಗಿದೆ,
ಉಸಿರು ಕಟ್ಟಿದೆ, ಜೀವ ಬೆಚ್ಚಿದೆ,
ಉಳಿವ ಆಸೆಯು ನೆಲವ ಕಚ್ಚಿದೆ.

ಕೊನೆಯ ಉಸಿರಿನ ಸಮಯ ಬಂದಿದೆ.
ಬೇರೆ ದಾರಿಯು ಈಗ ಕಾಣದೆ.
ದೇವ ದೇವನ ಮನದೆ ಬೇಡಿದೆ.
"ಒಡನೆ ನನ್ನನು ಕಾಯೊ ಒಡಯನೆ".

ತೇಲಿ ಬಂದಿತು ಮರದ ದಿಮ್ಮಿಯು,
ದೈವ ನೀಡಿದ ನನ್ನ ಕುದುರೆಯು,
ಶೃತಿಯ ಹಿಡಿಯಿತು ಎದೆಯ ನಾಡಿಯು,
ಎದೆಯ ತುಂಬಿದ ಪೊರೆದ ಸ್ವಾಮಿಯು.

ಕನಸು ಒಡೆಯಿತು, ಕಣ್ಣು ತೆರೆಯಿತು,
ತಿಳಿಯ ಬಿಸಿಲದು ಕಣ್ಣು ಹೊಡೆಯಿತು,
ನೀಲಿ ಕಡಲದು ನೋಡಿ ನಕ್ಕಿತು,
ಒಂದು ಜನುಮವು ಕಳದು ಹೋಯಿತು!