Thursday, June 23, 2022

ಹದಿಹರೆಯ

ಹದಿಹರೆಯವು ಹೆದೆಯೇರಿದೆ,

ಹರುಷ, ಹಿಗ್ಗು ಹೊಮ್ಮುತಿದೆ!

 

ಹಾಲ್ಗಲ್ಲದ ಹಾಲು ಹಿಂಸರಿದಾಯ್ತು,

ಹೊಂಬಣ್ಣಕೆ ಹೆಜ್ಜೆಯ ಹಾಕಾಯ್ತು.

ಹಸುಗೂಸುಗಳಲ್ಲ ಹದಿಹರಯದ ಹುಂಬರು,

ಹುರುಪಿನ ಹಬ್ಬಕೆ ಹದವಾಗಿಹರು!


ಹದ್ದನು ಹೇರುವ ಹೆತ್ತವರನಿವರು,

ಹದ್ದಿಗೆ ಹೋಲಿಸುವ ಹತಾಶರು!

ಹಿತೈಷಿಗಳು ಹಾಡುವ ಹಿತನುಡಿಯು,

ಹಿಡಿಸದೆ ಹಿಂಡಿ ಹಿಪ್ಪೆಯಾದವರು!

 

ಹಂಬಲಿಸುತಿದೆ ಹೃದಯವು,

ಹೊಸತನದ ಹಸಿ ಹರುಷಕೆ,

ಹದ್ದುಗಳ ಹರಿದು, ಹೆದಿರಿಕೆಯ ಹುರಿದು,

ಹಕ್ಕಿಗಳಾಗಿ ಹಾರುತ್ತ ಹೋಗಲು!

Wednesday, January 12, 2022

ಅಂಧಕಾರ

ಕುರುಡು ಮನಸಿಗೆ ಅಂಧಕಾರವು,

ಬಾಯಾರಿದೆ ಜ್ಞಾನದ ಬೆಳಕಿಗೆ.

ಅಮಾವಾಸ್ಯೆಯ ಇರುಳಿನಲ್ಲಿ

ಕಾದಿದೆ ರವಿ ಚಂದ್ರರಿಗೆ!


ಇರುಳ ನಂಬಿದ ದುರುಳರೆಲ್ಲರ,

ಅಟ್ಟಹಾಸವು ಮಿತಿಮೀರಿದೆ.

ಹರಿಯಬೇಕಿದೆ ಕಾಲದ ಬೆಳಕು,

ಸರಿಸೆ ಮುಚ್ಚಿದ ಪರದೆಯ!


ಕಣ್ಣು ಮುಚ್ಚಲು ಕಾಣದೇನೂ,

ಕಣ್ತೆರೆ ಜಗದ ಕಟುಸತ್ಯಕೆ,

ಕತ್ತಲಾದ ಬದುಕುಗಳಿಗೆ

ಸುತ್ತ ದೀಪದ ಬೆಳಕಿದೆ!



ಹಸಿಹಸಿ ಅನುಭವ

ಕಣ್ಣು ಕಣ್ಣು ಕಲೆತಾಗ,

ಎದೆಎದೆಗಳು ಮಿಡಿದಾಗ,

ಗರಿಗರಿಯ ಹೊಸ ರಾಗ,

ಜುಳು ಜುಳು ಹರಿದಾಗ!


ಮುಸಿ ಮುಸಿ ನೀ ನಕ್ಕಾಗ,

ಖುಷಿ ಖುಷಿಯು ಎದೆಯಾಗ,

ಢವ ಢವದ ನಿನ್ನೆದೆಯು

ಭಲೆ ಭಲೆ ಎಂದಾಗ!


ತುಟಿ ತುಟಿಗಳು ಬೆಸೆದಾಗ

ಹಸಿ ಹಸಿಯ ಅನುಭಾವ

ಬಿಸಿ ಬಿಸಿಯ ಮೈಯಾಗ,

ಚಳಿ ಚಳಿಯು ಬಿಟ್ಟಾಗ!

ಸುಗ್ಗಿಯ ಹಿಗ್ಗು

ಸುಗಿಯ ಕಾಲದ ಹುಗ್ಗಿಯ ಸವಿಯುವೆ,

ಸಗ್ಗದ ಹಿಗ್ಗಿನ ಬುಗ್ಗೆಯ ಹೀರುವೆ!


ಮೊಗ್ಗಿನ ನಗುವನು ಹಿಗ್ಗಿಸಿಬಿಡುವೆ,

ಜಗ್ಗದ ದುಃಖವ ಬಗ್ಗಿಸಿಬಿಡುವೆ!

ನುಗ್ಗುತ ಓಡುತ ಲಗ್ಗೆಯ ಹಾಕುವೆ,

ಒಗ್ಗದ ಮನಗಳ ಒಗ್ಗಿಸಿಕೊಳ್ಳುವೆ!


ಗಲ್ಲದ ಪೆಟ್ಟಿಗೆ ಘಲ್ಲೆನುತಿರಲು,

ಹುಲ್ಲೆಗೆ ತುರುವೆ ಮಲ್ಲಿಗೆ ಹೂವ,

ನಲ್ಲೆಯ ಗಲ್ಲವ ಮೆಲ್ಲಗೆ ಗಿಲ್ಲುತ,

ಎಳ್ಳು ಬೆಲ್ಲವ ಮೆಲ್ಲನೆ ಮೆಲ್ಲುವೆ!


ಹುಬ್ಬಿನ ಬಾಣಕೆ ಎದೆಯನು ಉಬ್ಬಿಸಿ,

ನನ್ನಯ ಗುಬ್ಬಿಯ ತಬ್ಬುತ ಹಿಡಿಯುವೆ!

ಹಬ್ಬದ ದಿನವು ಅಬ್ಬೆಗೆ ನಮಿಸಿ,

ಕಬ್ಬನು ಸವಿದು, ಒಬ್ಬಟ್ಟುಣ್ಣುವೆ!



Saturday, December 4, 2021

ಯತ್ರ ನಾರ್ಯಸ್ತು ಪೂಜ್ಯಂತೆ...

ನಾಚಿಕೆಯಲಿ ತಲೆಯಿಂದು ತಗ್ಗಿದೆ, ನಿಂತಿಲ್ಲವಿನ್ನೂ ಕಣ್ಣೀರಧಾರೆ,

ಭಾರತಾಂಬೆಯ ಮಡಿಲಲಿ ಮುದುಡಿವೆ ಹೊಸ ಕನಸುಗಳು,

ಪೈಶಾಚಿಕತೆಗೆ ಬಲಿಯಾಗಿ ನಲುಗಿವೆ ನವಕುಸುಮಗಳು.


“ಕಾಮಾತುರಾಣಾಂ ನ ಭಯಂ ನ ಲಜ್ಜಾ”,

ಹತೋಟಿಯಿಲ್ಲದ ಮೃಗಗಳೇ ನಾವು?

ನಾಗರಿಕತೆಯು ಕೇವಲ ಕಥೆಯಾಗುಳಿದಿದೆಯೇ?


“ನ ಸ್ತ್ರೀ ಸ್ವಾತಂತ್ರ್ಯಮರ್ಹತಿ”

ಭಂಡ, ಪುಂಡ ಕಾಮುಕರ ಭಯವೇ?

ಅವರನ್ನು ಬದಲಾಯಿಸಲಾಗದ ಅಸಮರ್ಥತೆಯೇ?


“ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ”

ಆ ತಾಯಿಯಿಂದು ಶಕ್ತಿಹೀನಳಾಗಿ ತಲೆತಗ್ಗಿಸಿರುವಳೇ?

ಮಹಿಷರು, ರಕ್ತ ಬೀಜಾಸುರರು ಅಟ್ಟಹಾಸಗೈಯ್ಯುತ್ತಿರುವರೇ?


“ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ”

ಹೇ ದೇವ! ಇನ್ನೂ ಧರ್ಮವು ಉಳಿದಿದೆಯೇ ಭೂಮಿಯ ಮೇಲೆ?

ದ್ರೌಪದಿಯ ಪೊರೆದರೆ ಸಾಕೆ? ಸಂಕಟದ ಆರ್ತನಾದವು ಕೇಳುತ್ತಿಲ್ಲವೇ?


“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:”

ತೊರೆದುಬಿಟ್ಟರೇ ದೇವತೆಗಳು ನಮ್ಮ ನಾಡನೇ?

ನಿಲ್ಲದಾಗಿದೆ ಈ ನಾಚಿಕೆಗೇಡಿನ ಪೈಶಾಚಿಕ ವರ್ತನೆ!



ಕನ್ನಡಿಗನ ಕಥೆ


ಕನ್ನಡ, ಕನ್ನಡ, ಕನ್ನಡವೆಂದರೂ ವೇದಿಕೆಯನೇರಿ,

“ಎನ್ನಡ”, “ಎಕ್ಕಡ”, “ವ್ಹಾಟ್ ಡ”, ಎನ್ನುವುದಾಯಿತು ದಿನಚರಿ.

ಏಕೆ ಹೀಗೆ? ಏಕೆ ಹೀಗೆ? ಎಂದು ಅಚ್ಚರಿ ಪಡದಿರಿ,

ಇದು “ಅತಿಥಿ ದೇವೋಭವ” ದ ವಿಪರೀತಾರ್ಥದ ಪರಿ!



ಊರ ಮಕ್ಕಳಿಗೆ ಕನ್ನಡ ಕಡ್ಡಾಯ ಮಾಡಿ ಎಂದರು.

ತಮ್ಮ ಮಕ್ಕಳನು ಇಂಗ್ಲೀಷ್ ಶಾಲೆಗೆ ಕಳಿಸಿದರು,

ಐ.ಟಿ., ಬಿ.ಟಿ., ಮಾಡಿಸಿ ವಿದೇಶಕೆ ರವಾನಿಸಿದರು,

ಕನ್ನಡದ ಮಾಣಿಯ ಕೈಯ್ಯಲ್ಲಿ ಮುಸುರೆ ತೊಳೆಸಿದರು!

ಮನದ ಮಣ್ಣಿನಲಿ


ಮನದ ಮಣ್ಣಿನಲಿ ಕುಡಿಯೊಡೆದ ಬಯಕೆಗೆ

ಆಸೆಯ ನೀರೆರೆದು, ಊಹೆಯ ಬೆಳಕನಿತ್ತು,

ಬೆಳೆಸಿ ಹೆಮ್ಮರವಾಗಿಸಿ, ಫಲ ಕೊಡದ ಅದರ

ರೆಂಬೆಗೆ ನೇಣು ಹಾಕಿಕೊಂಡವರೇ ಹೆಚ್ಚು!