Saturday, December 17, 2022

ಮುಕ್ತಕಗಳು - ೭೯

ಒಮ್ಮೆ ಮಾಡಿದ ತಪ್ಪ ಮತ್ತೊಮ್ಮೆ ಮಾಡದಿರು

ಸುಮ್ಮನೆಯೆ ಶ್ರಮ ಹಾಳು ಎಲ್ಲವೂ ಹಾಳು |

ಕಮ್ಮು ಹಿಡಿದರೆ ಒಮ್ಮೆ ಬಿಡದಲ್ಲ ಶ್ವಾನವದು

ಹಮ್ಮು ಬಿಡು ಅರಿತು ನಡೆ ~ ಪರಮಾತ್ಮನೆ ||೩೯೧||

ಕಮ್ಮು = ವಾಸನೆ, ಹಮ್ಮು = ಗರ್ವ


ಬಸಿರ ಆಸರೆ ಕೊಟ್ಟು ಬುವಿಗಿಳಿಸಿದಳು ಜನನಿ

ಉಸಿರ ಸಾಲವ ಕೊಟ್ಟು ಬದುಕಿತ್ತಳವನಿ |

ಬಸಿರ ಆಸರೆ ಉಸಿರ ಸಾಲಕ್ಕೆ ಪ್ರತಿಯಾಗಿ

ಮಸಿಯ ಬಳಿಯಲು ಬೇಡ ~ ಪರಮಾತ್ಮನೆ ||೩೯೨||


ಸಹಿಸೆ ಉಳಿಪೆಟ್ಟುಗಳ ಶಿಲೆ ಮೂರ್ತಿಯಾಗುವುದು

ಸಹಿಸದಿರೆ ಕಾಲಡಿಯ ದಾರಿಗಲ್ಲಾಯ್ತು |

ಸಹಿಸಿಕೋ ಕಷ್ಟಗಳ ದೃಢಮನದ ಅಂಕೆಯಲಿ

ಕಹಿ ಕಳೆದು ಸಿಹಿ ಬಹುದು ~ ಪರಮಾತ್ಮನೆ ||೩೯೩||


ಉಸಿರು ನಿಂತರೆ ಏನು ಹೆಸರು ನಿಂತರೆ ಸಾಕು

ಹಸಿರಾಗಿ ಉಳಿಯುವುದು ನೆನಪು ಮಾಸದೊಲು |

ಕಸಿವ ರೋಧನ ಕನಕಗಳನೆಲ್ಲ ಉಳಿದಿರುವ

ಹೆಸರೊಂದೆ ಶಾಶ್ವತವು ~ ಪರಮಾತ್ಮನೆ ||೩೯೪||


ಹುಟ್ಟುತಲೆ ಅತ್ತಾಗ ನಕ್ಕವರು ಬಂಧುಗಳು

ಕೆಟ್ಟು ಅತ್ತಾಗ ನಕ್ಕವರು ಬಂಧುಗಳೆ? |

ಮೆಟ್ಟಿ ಭೇದಗಳ ಕೈಜೋಡಿಸಿರೆ ಬಂಧುಗಳು

ಚಟ್ಟಕ್ಕೆ ಹೆಗಲೀಯೆ ~ ಪರಮಾತ್ಮನೆ ||೩೯೫||

ಮುಕ್ತಕಗಳು - ೭೮

ದುಶ್ಚಟವು ಬೆಳೆಯಲಿಕೆ ಕಾರಣವು ನೂರಿರಲಿ

ನಿಶ್ಚಯವ ಮಾಡಬೇಕಿದೆ ಅದನು ತೊರೆಯೆ |

ಪಶ್ಚಾದ್ವಿವೇಕಕೆಲ್ಲಿದೆ ಸಮಯ ಸರಿಪಡಿಸೆ

ಪಶ್ಚಿಮದ ರವಿ ಹೊರಟ ~ ಪರಮಾತ್ಮನೆ ||೩೮೬||

ಪಶ್ಚಾದ್ವಿವೇಕ = ಕೆಟ್ಟ ಮೇಲೆ ಬಂದ ಬುದ್ಧಿ 


ಕ್ಷಮಿಸಬೇಕಿದೆ ನಮ್ಮ ಎದೆಭಾರ ಹೋಗಿಸಲು

ಕ್ಷಮಿಸಬೇಕಿದೆ ಸುಡುವ ಬೆಂಕಿಯಾರಿಸಲು |

ಕ್ಷಮಿಸುತ್ತ ಉಳಿಸಬೇಕಿಹುದು ಸಂಬಂಧಗಳ

ಕ್ಷಮಿಸಿಬಿಡು ತಡವೇಕೆ ~ ಪರಮಾತ್ಮನೆ || ೩೮೭||


ಬಯಸದಿರು ಪದವಿಯನು ಯೋಗ್ಯತೆಗೆ ಮೀರಿದುದ

ಬಯಸದೇ ಬಂದಿರಲು ಮನವಿಟ್ಟು ಶ್ರಮಿಸು |

ಬಯಸಿದರೆ ಬಯಸು ಭಗವದನುಗ್ರಹವ ಮಾತ್ರ

ಬಯಸುತಿರು ಜನರೊಳಿತ ~ ಪರಮಾತ್ಮನೆ ||೩೮೮||


ಧರ್ಮವೆಂದರೆ ಪೂಜಿಸುವ ಪದ್ಧತಿಯು ಅಲ್ಲ

ಕರ್ತವ್ಯವದು ನಿನ್ನ ಪಾತ್ರಕನುಸಾರ |

ಧರ್ಮ ಮಾತೆಗೆ ಬೇರೆ ಪಿತೃವಿಗೇ ಬೇರೆಯಿರೆ

ಮರ್ಮವನರಿತು ಬಾಳು ~ ಪರಮಾತ್ಮನೆ ||೩೮೯||


ಮಕರಂದ ಹೂವಿನದು ಚಿಟ್ಟೆ ದುಂಬಿಯ ಪಾಲು

ಪಕಳೆಗಳು ಕಣ್ಮನಗಳನು ಮುದಗೊಳಿಸಲು |

ಸಕಲ ಗಂಧಗಳು ಆಸ್ವಾದಕರ ಸ್ವತ್ತಾಯ್ತು 

ವಿಕಲವಾಯಿತೆ ಪುಷ್ಪ? ~ ಪರಮಾತ್ಮನೆ ||೩೯೦||

ಮುಕ್ತಕಗಳು - ೭೭

ಬುವಿಯಲ್ಲಿ ಜೀವನವು ಗೋಜಲಿನ ಗೂಡಂತೆ

ಕಿವಿಮಾತ ಪಾಲಿಸಿರೆ ಸರಳ ಸೋಪಾನ |

ಅವಿರತ ಶ್ರಮ ಸಹನೆ ಅನಸೂಯೆ ಕ್ಷಮೆಗಳಿರೆ

ಸವಿಗೊಳಿಸುವವು ಬದುಕ ~ ಪರಮಾತ್ಮನೆ ||೩೮೧||

ಅನಸೂಯೆ = ಅಸೂಯೆ ಇಲ್ಲದಿರುವುದು


ಬಣ್ಣಗಳು ಏಸೊಂದು ನಮ್ಮ ಭೂಲೋಕದಲಿ

ಕಣ್ಣುಗಳು ಸವಿಯುತಿವೆ ರಸಪಾಕ ನಿತ್ಯ |

ಉಣ್ಣಲೇನಿದೆ ಕೊರೆ ಪ್ರಕೃತಿಯೇ ಅಟ್ಟುತಿರೆ

ಬಣ್ಣಿಸಲು ಸೋತ ಸನೆ ~ ಪರಮಾತ್ಮನೆ ||೩೮೨||

ಅಟ್ಟು = ಅಡುಗೆ ಮಾಡು, ಸನೆ = ನಾಲಿಗೆ


ಸಂತಸವ ಹಂಚಿದರೆ ಸಂತಸವು ಹೆಚ್ಚುವುದು

ಕಂತೆ ಧನ ಹೆಚ್ಚಿಸುವ ಸಂತಸವು ಕ್ಷಣಿಕ |

ಅಂತರಾತ್ಮನ ಅರಿಯೆ ಶಾಶ್ವತದ ಸಂತಸವು

ಚಿಂತೆಯನು ಮರೆಸುವುದು ~ ಪರಮಾತ್ಮನೆ ||೩೮೩||


ದನಿಯಿರದ ಜೀವಿಗಳ ಕಾಡಾಗುತಿದೆ ನಷ್ಟ

ಮನುಜನಾಕ್ರಮಣದಿಂ ಬದುಕುವುದೆ ಕಷ್ಟ |

ವನಜೀವಿ ತಿರುಗಿಬೀಳುವ ಮುನ್ನ ಎಚ್ಚೆತ್ತು

ದನಿಯಾಗು, ಸಹಬದುಕು ~ ಪರಮಾತ್ಮನೆ ||೩೮೪||


ಊರ ದೊರೆಯಾದರೂ ಅಮ್ಮನಿಗೆ ಮಗ ತಾನು

ಕಾರುಬಾರಿರಲೇನು ಗುರುವಿನಾ ಶಿಷ್ಯ |

ಚಾರುಮತಿಯಾದರೂ ಪತಿಯ ನೆರಳಾಗುವಳು

ಜೋರು ಪಾತ್ರದ ಮಹಿಮೆ ~ ಪರಮಾತ್ಮನೆ ||೩೮೫||

ಚಾರುಮತಿ = ಜ್ಞಾನವಂತೆ

ಮುಕ್ತಕಗಳು - ೭೬

ಸಾಗರವು ಇರುವರೆಗೆ ಅಲೆಗಳವು ನಿಲ್ಲುವವೆ

ಭೋಗದಾಸೆಯು ನಿಲದು ಜೀವವಿರುವರೆಗೆ |

ಜೋಗಿಯಾಗುವುದೇಕೆ ಆಸೆಗಳ ಅದುಮಿಡಲು

ಯೋಗ ಮನಸಿಗೆ ಕಲಿಸು ~ ಪರಮಾತ್ಮನೆ |೩೭೬||


ಬೇಯಿಸಲು ರಂಜಿಸಲು ಶಯನದಲು ಯಂತ್ರಗಳು!

ಆಯಾಸ ದೇಹಕ್ಕೆ ಲವಲೇಶವಿಲ್ಲ |

ಕಾಯಕ್ಕೆ ಅತಿಸುಖದ ಸೇವೆಯಾ ಅತಿಶಯವು

ನೋಯುತಿದೆ ಮನಸೊಂದೆ ~ ಪರಮಾತ್ಮನೆ ||೩೭೭||


ಧನವನ್ನು ಪಡೆವಾಸೆ ನೆಮ್ಮದಿಯ ಜೀವನಕೆ

ಧನವಧಿಕ ದೊರೆತವಗೆ ನೆಮ್ಮದಿಯು ಎಲ್ಲಿ? |

ಧನವು ತರುವುದು ಚಿಂತೆ ಹಲವಾರು, ನೆಮ್ಮದಿಗೆ

ಮನದೆ ತೃ ಪ್ತಿಯುಬೇಕು ~ ಪರಮಾತ್ಮನೆ ||೩೭೮||


ಕೊಡಿ ಕೊಡದೆ ಇರಿ ಮಕ್ಕಳಿಗೆ ಧನಕನಕಗಳನು

ಕೊಡಬೇಕು ಮಾನವತ್ವದ ಪಾಠವನ್ನು |

ನೆಡಬೇಕು ದೇಶಭಾಷೆಯ ಭಕ್ತಿ ಬೀಜವನು

ಸುಡಬೇಕು ವೈಷಮ್ಯ ~ ಪರಮಾತ್ಮನೆ ||೩೭೯||


ಕರಿನೆರಳ ಛಾಯೆಯಲಿ ಮುಳುಗಿಹುದು ಜಗವಿಂದು

ಜರಿದಿಹೆವು ಅವರಿವರ ಕಾರಣವು ಸಿಗದೆ |

ಕಿರಿದಾದ ಮನಗಳಲಿ ಮೂಡಬೇಕಿದೆ ಬೆಳಕು

ಹರಿ ನೀನೆ ಕರುಣಿಸೋ ಪರಮಾತ್ಮನೆ ||೩೮೦||


ಮುಕ್ತಕಗಳು - ೭೫

ಅಲ್ಪನಿಗೆ ಐಶ್ವರ್ಯ ಬಂದಾಗ ಉಳಿಯದದು

ಸ್ವಲ್ಪ ಕಾಲವೆ ಮಾತ್ರ ಇಂದ್ರವೈ ಭೋಗ |

ಶಿಲ್ಪಕ್ಕೆ ಸಿಂಗಾರ ಜೀವ ತುಂಬದು ಅದಕೆ

ಕಲ್ಪನೆಯ ಕೂಸಹುದು ~ ಪರಮಾತ್ಮನೆ ||೩೭೧||

ಅಲ್ಪ = ದುರಭಿಮಾನಿ

 

ಹೆಸರು ಮಾಡಲು ತಂತ್ರಗಾರಿಕೆಗೆ ಶರಣೇಕೆ?

ಬಸಿ ಬೆವರ ನಿನ್ನ ಕಾರ್ಯಕ್ಷೇತ್ರದಲ್ಲಿ |

ಪಸರಿಸುತ ನಿನ ಕಾರ್ಯ ಜನರೆದೆಗೆ ಮುಟ್ಟಿದೊಡೆ

ಹಸಿರಾಗುವುದು ಹೆಸರು ~ ಪರಮಾತ್ಮನೆ ||೩೭೨||


ಗಗನವನು ನೋಡಲಿಕೆ ನೂಕಾಟ ಏತಕ್ಕೆ?

ಜಗಳವದು ಏಕೆ ಸಾಗರದಿ ಈಜಲಿಕೆ? |

ಜಗಪತಿಯ ಮಂದಿರದಿ ತಳ್ಳಾಟ ಬೇಕಿದೆಯೆ

ಭಗವಂತನಾ ಕೃಪೆಗೆ? ~ ಪರಮಾತ್ಮನೆ ||೩೭೩||


ಬೆಳಕು ಇರುವೆಡೆಯಲ್ಲೆ ಕರಿನೆರಳು ಮೂಡುವುದು

ಕಲಹ ಪತಿಪತ್ನಿಯರ ಸನಿಹ ಮಾಡುವುದು |

ಬೆಳೆಗಿಂತ ದಿವಿನಾಗಿ ಕಳೆಯು ತಲೆಯೆತ್ತುವುದು

ಇಳೆಯ ವೈರುಧ್ಯಗಳು ~ ಪರಮಾತ್ಮನೆ ||೩೭೪||


ಕೈಯಲ್ಲಿ ಜಪಮಾಲೆ ಮನದಲ್ಲಿ ಮಧುಬಾಲೆ

ಬಾಯಲ್ಲಿ ಮಂತ್ರಗಳು ತಲೆಯಲ್ಲಿ ತಂತ್ರ |

ನಾಯಕರು ಹೀರಿಹರು ಪ್ರಜೆಗಳಾ ರಕುತವನು

ಲಾಯಕ್ಕೆ ಬದುಕಲಿಕೆ? ~ ಪರಮಾತ್ಮನೆ ||೩೭೫||

ಮುಕ್ತಕಗಳು - ೭೪

ನುಡಿಯಲ್ಲಿ ವೇದಾಂತಸಾರದಾ ಪಲಕುಗಳು

ನಡೆಯಲ್ಲಿ ತೋರಿಕೆಯ ಹುಸಿಯ ಥಳಕುಗಳು |

ಬಡಿವಾರ ಬದುಕಿನಲಿ ಏಕಿಂಥ ಹುಳುಕುಗಳು?

ಸುಡುಗಾಡು ಸನಿಹವಿದೆ ~ ಪರಮಾತ್ಮನೆ ||೩೬೬||


ಕನಸಿರಲು ಸಾಧಿಸಲು ಕಾಣುವುದು ಕೃತಿಯಲ್ಲಿ

ಅನವರತ ಗುರಿಯಕಡೆ ಸಾಗುವುದು ಹೆಜ್ಜೆ |

ಕೊನೆಯ ಮುಟ್ಟುವ ಛಲವು ಕಾಣುವುದು ಕಂಗಳಲಿ

ಸನಿಹ ಸುಳಿಯದು ಜಡತೆ ~ ಪರಮಾತ್ಮನೆ ||೩೬೭||


ಸಂಕಲ್ಪ ಬಲವು ತಾನ್ ಎಲ್ಲ ಬಲಗಳ ರಾಜ‌

ಸಂಕಟದ ಸಮಯದಲಿ ಸರಿ ರಾಮಬಾಣ |

ಲಂಕೆಗೇ ಹಾರಿದ್ದ ಹನುಮನಾ ಬಲದಂತೆ

ಶಂಕೆಯೇ ಇರದ ಬಲ ~ ಪರಮಾತ್ಮನೆ ||೩೬೮||


ಮಸಣಕ್ಕೆ ಸನಿಹದಲಿ ತಲುಪಿ ನಿಂತಿದ್ದರೂ

ಹೊಸದೊಂದು ಮರದ ಸಸಿ ನೆಟ್ಟು ಮರೆಯಾಗು

ಹಸಿ ತಂಪು ನಿನಗಿತ್ತ ಮರವನ್ನು ನೆಟ್ಟವರ

ಹೆಸರ ಬಲ್ಲೆಯ ನೀನು ~ ಪರಮಾತ್ಮನೆ ||೩೬೯||


ಸಾಗರದ ನೀರಿನಲಿ ಬೆರೆತಿರುವ ಲವಣದೊಲು 

ಬೇಗುದಿಯು ಮನದಲ್ಲಿ ಬೆರೆತು ನಿಂತಿಹುದು |

ಪೋಗಾಡು ಲವಣವನು ನೀರನ್ನು ಸಂಸ್ಕರಿಸಿ

ರಾಗ ತೊಳೆ ಮನದಿಂದ ~ ಪರಮಾತ್ಮನೆ ||೩೭೦||

ಪೋಗಾಡು = ಹೋಗಲಾಡಿಸು

ಮುಕ್ತಕಗಳು - ೭೩

ಸಾಧನೆಯು ಸಫಲವದು ಜನಕೆ ಉಪಯುಕ್ತವಿರೆ

ಬೋಧಿಸದ ಜ್ಞಾನಿಯಿರೆ  ಶಿಷ್ಯರಿರಲೇಕೆ |

ಗೋಧಿಯನು ಬೆಳದೇನು ಫಲ ರೊಟ್ಟಿ ಉಣ್ಣದಿರೆ

ಹಾದಿ ಹಿಡಿ ಜನಪರದ ~ ಪರಮಾತ್ಮನೆ ||೩೬೧||


ವಿಧಿಬರಹ ಕಾಕಲಿಪಿ ಅರಿಯುವುದು ಬಲುಕಷ್ಟ

ಬದುಕು ಸವೆಸುವುದೇಕೆ ಅದನು ಓದಲಿಕೆ |

ಬದಿಗೆ ಸರಿಸುತ ಅದನು ಹಿಡಿ ಬೇಗ ಲೇಖನಿಯ

ಒದಗಿಸಲು ಹೊಸಬರಹ ~ ಪರಮಾತ್ಮನೆ ||೩೬೨||


ಪತಿ ಪತ್ನಿ ಸಂಬಂಧ ಉತ್ಕೃಷ್ಟ ಇಳೆಯಲ್ಲಿ

ಜೊತೆನಡೆಸಿ ಅಪರಿಚಿತ ಮನಗಳನು ಬೆಸೆದು |

ಅತಿ ಕಠಿಣ ಒರೆತಕ್ಕೆ ಒಡ್ಡಿಕೊ ಳ್ಳುತ ಗೆದ್ದು

ಚಿತೆಯಲ್ಲಿ ಭಸ್ಮವದು ~ ಪರಮಾತ್ಮನೆ ||೩೬೩||


ಹಸಿದಿರಲು ಹೊಟ್ಟೆ ಅನ್ನದ ಚಿಂತೆಯೊಂದಿಹುದು

ಹಸಿವ ನೀ ಗಿಸಲು ನೂರೆಂಟು ಚಿಂ ತೆಗಳು |

ಹಸಿವಿರಲಿ ತೀರದೊಲು ಜ್ಞಾನದಾ ಪಥದಲ್ಲಿ

ಹುಸಿಯ ಬೇ ಡಿಕೆಯಲ್ಲ ಪರಮಾತ್ಮನೆ ||೩೬೪||


ನೋವಿನಾ ನೆನಪುಗಳ ಭೂತವದು ಬೆಂಬಿಡದು

ನಾವು ಹೊರಗಟ್ಟದಿರೆ ಬಲವಂತದಿಂದ |

ಶಾವಿಗೆಯ ಪಾಯಸದಿ ಕೂದಲದು ಬೇಕೇನು

ಸೋವಿಗೂ ಬೇಡವದು ~ ಪರಮಾತ್ಮನೆ ||೩೬೫||

ಸೋವಿ = ಅಗ್ಗ