ಮುಸಲಧಾರೆಯ ಏಟಿಗೆ, ಉಕ್ಕೊ ನದಿಗಳ ರಭಸಕೆ.
ಮಸಣವಾಯಿತು ದೇವಭೂಮಿ
ಪ್ರಳಯನಾದದ ಧಾಟಿಗೆ,
ನಿಂತ ನೆಲವು ಹಾಗೇ ಕುಸಿದರೆ
ಆಸರೆಯೆಲ್ಲಿದೆ ಬದುಕಿಗೆ.
ತಂದೆ ತಾಯರ, ಮುದ್ದುಮಕ್ಕಳ
ತೋಳಹಾರದ ಬದಲಿಗೆ,
ಅಗಲಿಕೆಯ ಕಲ್ಲ ಬಂಡೆಯು
ಜೋತುಬಿದ್ದಿತು ಕೊರಳಿಗೆ!
ಗರ್ಭಗುಡಿಯಲಿ, ದೇವನೆದುರಲಿ
ಪ್ರಾಣಭಿಕ್ಷೆಯ ಹರಕೆಗೆ,
ಸಾವುನೋವಿನ ವರವು ದೊರೆಯಿತು,
ಸ್ತಬ್ಧವಾಯಿತು ಗುಂಡಿಗೆ!
ಕ್ರೂರಮೃಗಗಳ, ಕ್ಷುದ್ರಮನಗಳ,
ಕಾಮ, ಲೋಭದ ಮತ್ತಿಗೆ,
ಸತ್ತ ಶವಗಳು ಮತ್ತೆ ಮಡಿದವು,
ನಾಚಿಕೆಗೇಡು ನಾಡಿಗೆ, ನಾಚಿಕೆಗೇಡು ನಾಡಿಗೆ!
No comments:
Post a Comment