ನಾರೇಯಣ ಗುರು, ನಾರೇಯಣ ಗುರು,
ಬಂದೆವು ನಿನ್ನಯ ಪಾದಕೆ ಶರಣು!
ಪಾವನ ಪುಣ್ಯದ ಜನ್ಮವ ಪಡೆದೆ,
ಆತ್ಮವು ತೋರಿದ ದಾರಿಯ ಹಿಡಿದೆ.
ಅಮರ ನಾರಾಯಣ ಪ್ರಸಾದನೇ,
ಕೈವರ ಪುರದ ಮಹಾತ್ಮನೇ!
ಎಂಜಲ ಕೂಳಿಗೆ ಪರಾಕು ಏಕೆ,
ಸಂಸಾರಿಗಳಿಗೇಕೆ ವಾರಾಂಗನೆಯು?
ಮರಗಳ ಕಡಿದು ಹಾಳಾಗದಿರಿ,
ಹೇಳಿದೆ ಜೀವನ ತತ್ವಗಳ!
ಅರ್ಥವಿಲ್ಲದ ಓದದು ಏಕೆಂದೆ,
ಮತಕುಲಗಳಿಗೆ ಅರ್ಥವು ಇಲ್ಲೆಂದೆ.
ಸಾಮಾನ್ಯ ಜನರ ಸದ್ಗುರು ನೀನು,
ಬದುಕಿನ ಪಾಡನೇ ಹಾಡಾಗಿಸಿದೆ!
ತುದಿಮೊದಲರಿಯದ ಪಾಮರರಿಗೆ,
ಒಳಗಿನ ಆತ್ಮದ ಬೆಳಕನು ನೀಡಿದೆ.
ಬಳೆಗಾರ ನೀನು ಬಾಳನು ಬೆಳಗಿದೆ,
ನಾರೇಯಣ ಗುರು ತಾತಯ್ಯನಾದೆ.
ಕಲ್ಲನು ಬಾಯಲೇ ಸಕ್ಕರೆ ಮಾಡಿದೆ,
ನಮ್ಮಯ ಬದುಕಿಗೆ ಸಿಹಿಯನು ನೀಡು.
ಮಣ್ಣಿನ ಹಕ್ಕಿಗೆ ಜೀವವ ತುಂಬಿದೆ,
ಭಕ್ತಿಯ ದೀಪಕೆ ಪ್ರಾಣವ ನೀಡು!
ಹಾವಿನ ಬಾಯಲೇ ನೀರನು ತರಿಸಿದೆ,
ಬತ್ತಿದ ಬದುಕಿಗೆ ಜಲವನು ನೀಡು.
ಒಕ್ಕಣ್ಣನಿಗೆ ನೀ ನೀಡಿದೆ ಕಣ್ಣನು,
ನೀಡು ನಮಗೆ ಜ್ಞಾನದ ನೇತ್ರವ!
ಅಂತಃಚಕ್ಷುವು ತೆರಯಿತು ನಿನಗೆ,
ಕಾಲದ ಜ್ಙಾನವ ನೀಡಿದೆ ನಮಗೆ.
ನಾರೇಯಣನ ಆತ್ಮದ ಬಂಧುವೆ,
ಅಮರನಾದೆ ಸಜೀವ ಸಮಾಧಿಯಲಿ!
*ಕೈವಾರ ತಾತಯ್ಯ ರಾಷ್ಟ್ರಮಟ್ಟದ ಕವನ ಸ್ಪರ್ಧೆ* ಯಲ್ಲಿ
ದ್ವಿತೀಯ ಬಹುಮಾನ ಪಡೆದ ಕವನ
No comments:
Post a Comment