Monday, July 11, 2022

ಮುಕ್ತಕಗಳು - ೧೧

ಪ್ರಣವವೇ ಪ್ರಥಮ ರವ ಸೃಷ್ಟಿಯಾರಂಭದಲಿ

ಕಣಕಣಕೆ ತಾಯ್ನಾಡಿಯನುಭವವ ನೀಡಿ |

ತಣಿಸಿ ಮನ ತನುವಿಗೀಯ್ವುದು ಮುದದ ಚೈತನ್ಯ

ಮಣಿವೆ ನಾ ಪ್ರಣವಕ್ಕೆ ಪರಮಾತ್ಮನೆ ||೫೧||


ಈಶ್ವರನ ದಯವಿರದೆ ಕಾಗೆ ಕಾಯೆನದು ಜಗ

ದೀಶ್ವರನ ದಯವಿರದೆ ಮೋಕ್ಷವದು ಹೇಗೆ |

ಈಶ್ವರನೆ ಬದುಕಿನಲಿ ಶ್ರೀಚರಣ ಪಿಡಿದಿಹೆನು

ಶಾಶ್ವತದೆಡೆಯ ನೀಡು ಪರಮಾತ್ಮನೆ ||೫೨||


ವೇದಗಳ ಕಾಲದಲಿ ಕಂಡ ನಾರೀಸಮತೆ

ಗಾದೆಗಳ ಕಾಲಕ್ಕೆ ಕಾಣದಾಯ್ತಲ್ಲ |

ಪಾದಗಳ ತೊಳೆದರೂ ನೀಡಿಲ್ಲ ಸಮತೆಯನು

ಭೇದವನಳಿಸಿ ಪೊರೆಯೊ ಪರಮಾತ್ಮನೆ ||೫೩||


ದಾನವರ ಸಂಹರಿಸಲವತಾರಗಳನೆತ್ತಿ

ನೀನವರ ಸಂಹರಿಸಿ ಜಗವನ್ನು ಕಾಯ್ದೆ |

ಮಾನವರೆದೆಯ ದಾನವತೆ ಕಾಣಲಿಲ್ಲವೇ

ನೀನದನು ಮರೆತೆಯಾ ~ ಪರಮಾತ್ಮನೆ ||೫೪||


ಕರ್ಮದಾ ವಿಧಿಯಾಟ ಯಾರಿಗೂ ತಪ್ಪದದು

ಮರ್ಮವನರಿತು ಜರಿಯದಿರು ನೋಯಿಸಿದರೆ |

ಧರ್ಮವನು ಪಾಲಿಸುತ ಕರ್ಮವನು ಸವೆಸುತಿರು

ನಿರ್ಮಲದ ಮನದಿಂದ ~ ಪರಮಾತ್ಮನೆ ||೫೫||


ಮುಕ್ತಕಗಳು - ೧೦

ವಾದಮಾಡಿದರೆ ಫಲವಿಲ್ಲ ಮೂರ್ಖರ ಜೊತೆಗೆ 

ವಾದ ಮಾಡುವುದು ಸಲ್ಲದು ವಿತಂಡಿಯೊಡೆ |

ವಾದ ಮಾಡುವುದು ಗೆಲುವಿಗೆನಲದು ಸರಿಯಲ್ಲ

ವಾದವಿದೆ ಮಂಥನಕೆ ಪರಮಾತ್ಮನೆ ||೪೬||


ಕ್ರೋಧವದು ಮೆರೆವಾಗ ವಾದಕಿಳಿಯುದಿರು ನೀ

ವ್ಯಾಧಿಯನು ಮುಚ್ಚಿಟ್ಟು ರೋಧಿಸಲು ಬೇಡ |

ಸಾಧನೆಗೆ ಗುರಿಯಿಂದ ದೃಷ್ಟಿ ಸರಿಸದೆ ಸದಾ

ಮಾಧವನ ನೆನೆಬೇಕು ಪರಮಾತ್ಮನೆ ||೪೭||


ಕರುಣೆಯಿಲ್ಲದ ಹೃದಯ ಎಣ್ಣೆಯಿಲ್ಲದ ದೀಪ

ಧರಣಿಯಲಿ  ಸಲ್ಲನೀ ದುರುಳದಾ ನವನು |     

ಮರಣದಲಿ ಜೊತೆಯಿಲ್ಲದೊಂಟಿಯಾಗುವನಲ್ಲ

ಕರುಣೆಯಿರೆ ಸಹಬಾಳ್ವೆ ಪರಮಾತ್ಮನೆ ||೪೮||


ಒಳಗಿನಾತ್ಮಕ್ಕಿದೆಯೊ ಕಣ್ಣು ಕಿವಿಯರಿವೆಲ್ಲ

ಬಳಿಯಿದ್ದು ನೋಡುತಿಹ ಸಿಸಿಕ್ಯಾಮೆರವು |

ಒಳಗಿನದು ಮನದ ಹೊರಗಿನದೆಲ್ಲವಚ್ಚಾಗಿ

ತಿಳಿಯುತಿದೆ ನಿನಗೆಲ್ಲ ಪರಮಾತ್ಮನೆ ||೪೯||


ಕಲಿಗಾಲ ಕವಿದಿಹುದು ಸತ್ಯಕ್ಕೆ ಕಾರ್ಮೋಡ

ಲಲನೆಯರಿಗಾಗುತಿದೆ ಶೋಷಣೆಯ ಶಿಕ್ಷೆ |

ಹುಲಿಗಳೇ ತೊಟ್ಟಿಹವು ಗೋಮುಖದ ಮುಖವಾಡ 

ಬಲಿಗಳೇ ಬೇಕೇನು ಪರಮಾತ್ಮನೆ ||೫೦||

ಮುಕ್ತಕಗಳು - ೭

ಉಸಿರು ತುಂಬಿದೆ ವೇಣುವಿಗೆ ನುಡಿಸೆ ಸವಿರಾಗ

ಉಸಿರು ತುಂಬಿದೆಯೆಮಗೆ ನುಡಿಯೆ ಸವಿಮಾತು |

ಉಸಿರು ಉಸಿರಲಿ ನಿನ್ನ ಉಸಿರಿರಲು ಜನರೇಕೆ

ಪಸರಿಸರು ಸವಿನುಡಿಯ ಪರಮಾತ್ಮನೆ ||೩೧||


ನಮಗಿರ್ಪ ಸತಿಸುತರು ಮಾತೆಪಿತರೆಲ್ಲರೂ

ನಮದೇನೆ ಪೂರ್ವಕರ್ಮದ ಫಲಿತವಂತೆ |

ನಮದಾದ ಕರ್ಮಗಳ ತೀರಿಸುವ ಪರಿಕರವು

ನಮಗಿರುವ ನಮ್ಮವರು ಪರಮಾತ್ಮನೆ ||೩೨||


ಯಾರು ಬಂದರು ಜನಿಸಿದಾಗ ಜೊತೆ ಜೊತೆಯಾಗಿ

ಯಾರು ಬರುವರು ಹೋಗುತಿರಲು ಜೊತೆಯಾಗಿ |

ಮೂರು ದಿನಗಳ ಪಯಣದಲಿ ಕಳಚಿದರೆ ಕೊಂಡಿ 

ಕೂರೆ ದುಃಖದಿ ಸರಿಯೆ ಪರಮಾತ್ಮನೆ ||೩೩||


ಒಲವಿರಲಿ ಮಕ್ಕಳಲಿ ನಲ್ಮೆ ಮಾಸದಹಾಗೆ

ಛಲವೇಕೆ ಬಹುಧನದ ಬಳುವಳಿಯ ಕೊಡಲು |

ಬಲಿಯಾಗುವರು ದುಂದು ದುಶ್ಚಟದ ಮೋಹಕ್ಕೆ

ಕಲಿಗಾಲ ತರವಲ್ಲ ಪರಮಾತ್ಮನೆ ||೩೪||


ಮರೆತು ವಾನಪ್ರಸ್ಥವನು ಬದುಕುತಿಹೆವಿಂದು

ಹೊರೆಯಾಗಿ ಜನಮನದ ಸೌಖ್ಯಕ್ಕೆ ಬಂಧು |

ಕರೆಯೆ ವೃದ್ಧಾಶ್ರಮವು ಯಾರು ಕಾರಣ ಪೇಳು

ಜರೆಯದಿರು ಪುತ್ರರನು ಪರಮಾತ್ಮನೆ ||೩೫||

ಕೃಷ್ಣಾ ಮುಕುಂದ

 ಕೃಷ್ಣಾ ಮುಕುಂದ ಹೇ ಪರಮಾತ್ಮ,

ಹೇಗೆ ಕರೆದರೂ ನಿನ್ನ ತೃಪ್ತ ನನ್ನಾತ್ಮ!

ನಾಮಮಾತ್ರದಲ್ಲೇ ಜೇನಿನ ಸ್ವಾದವು,

ದರುಶನದಲ್ಲಿ ಏನುಂಟೋ ಭಾಗ್ಯವು!    


ಈ ಬದುಕಲಿ ನಿನ್ನ ಕಾಣುವ ಬಯಕೆ,

ತೋರೋ ದಾರಿಯ ನಿನ್ನಯ ಗಮ್ಯಕೆ.

ವಿಶ್ವರೋಪ ತೋರಿದೆ ಆ ಪಾರ್ಥನಿಗೆ,

ತೋರೋ ನಿನ್ನ ನಿಜ ರೂಪ ಎನಗೆ!


ಆ ಮುರಳಿಯಲಿ ನಿನ್ನ ಉಸಿರು ಹರಿಸಿ ,

ನುಡಿಸಿದೆ ಎದೆಯಾ ಪ್ರೀತಿಯ ಬೆರೆಸಿ!

ಈ ದೇಹದಲಿ ನಿನ್ನ ಉಸಿರು ಸೇರಿಸಿದೆ,

ತೊಗಲು ಬೊಂಬೆಗೆ ಜೀವವ ತುಂಬಿದೆ!


ಈ ಜೀವ ನಿನ್ನದೇ ನಿನ್ನ ದಾಸ ನಾನು,

ನಿನ್ನಯ ಪಾದದ ಸೇವೆ ಕೊಡುವೆಯೇನು?

ನಿನ್ನ ಪಾದದಾಣೆ ಎಂದೂ ಬಿಡೆ ನಾನು,

ನಾಮವ ರೂಪವ ತುಂಬಿಕೊಂಡಿಹೆನು!


ನಿನ್ನ ಕಂಡ ಕೂಡಲೇ ಸಾಕು ಈ ಜೀವನ,

ನಿನ್ನ ಕಂಡ ರಾಧೆಯಂತೆ ಆಯಿತು ಪಾವನ!

ನೀ ಸಾಲ ಕೊಟ್ಟ ಉಸಿರು ಆ ನಿನ್ನ ಪಾದದಲೇ,

ಅರ್ಪಿಸಿ ಸಮರ್ಪಿಸಿ ಲೀನವಾಗುವೆ ನಿನ್ನಲೇ!

Sunday, July 10, 2022

ಮುಕ್ತಕಗಳು - ೩

ಯಶವ ಏನೆಂಬೆ? ಧನ, ವಿದ್ಯೆ, ಸಿರಿಸಂಪತ್ತೆ?

ಪಶು, ಭೂಮಿ, ಅಧಿಕಾರ, ಯೌವ್ವನದ ಬಲವೆ? |

ದಶಕಂಠ ಹೊಂದಿದ್ದೆಲ್ಲವೂ ಗೆಲಿಸಿದವೆ?!

ಯಶವ ಗುಣದಲಿ ನೋಡು ~ ಪರಮಾತ್ಮನೆ  ||೧೧||


ಗುಡಿ ಸುತ್ತಿ ಗುಂಡಾರ ಸುತ್ತಿ ದೇವನೊಲಿಸಲು

ಬಿಡದೆ ತೀರ್ಥಗಳ ಸುತ್ತಿಹೆ ಗಾಣದೆತ್ತೆ! |

ಒಡೆಯನನು ಮರೆತಾಗ ಎದೆಯ ಗೂಡಿನಲಿರುವ

ಕೊಡುವನೇ ಪರಮಪದ ~ ಪರಮಾತ್ಮನೆ ||೧೨||


ನಗೆಯ ಮಲ್ಲಿಗೆಯನರಳಿಸು ಸುಗುಣವಂತನೇ

ಮಗುವಂತೆ ನಕ್ಕುಬಿಡು ನೋವುಗಳ ಮರೆಸೆ |

ಸಿಗುವಂತೆ ಸಿಹಿಬೆಲ್ಲ ಬೇವಿನೆಸಳಿನ ಜೊತೆಗೆ

ಸಿಗಲಿ ಬಾಳಲಿ ಸವಿಯು ಪರಮಾತ್ಮನೆ  ||೧೩||


ಕಾವ್ಯಕನ್ನಿಕೆಯ ರಸಗಂಗೆ ಹರಿದಿದೆ ಸದಾ 

ದಿವ್ಯತೆಯ ಬೆಳಗುತಿಹ ದಿವಿನಾದ ಗೊಂಬೆ |

ನವ್ಯತೆಯ ನಗನತ್ತ ಕಾಲವೇ ಕೊಟ್ಟಿಹುದು

ಭವ್ಯತೆಗೆ ಕುಂದಿಲ್ಲ ಪರಮಾತ್ಮನೆ ||೧೪||


ಎಲ್ಲ ಚಪಲಗಳಲ್ಲಿ ನಾಲಿಗೆಯ ಚಪಲವೇ

ಬಲ್ಲಿದರು ಪೇಳಿಹರು ಬಲು ಜಿಗುಟು ಚಪಲ |

ಗಲ್ಲು ಶಿಕ್ಷೆಗೆ ಹೆದರದಿಹ ದುಷ್ಟ ದುರುಳನೊಲು

ಜೊಲ್ಲು ಸುರಿಸುವ ನಾಲ್ಗೆ ಪರಮಾತ್ಮನೆ ||೧೫||

ಮುಕ್ತಕಗಳು - ೬

ಏಕೆ ರಕ್ಷಿಸಿ ವರಾಹನೆ ಕರಪಿಡಿದೆಯೆನ್ನ  

ಸಾಕಾಯ್ತು ಬವಣೆ ಮನುಜನಿಗೆ ಮನೆಯಾಗಿ |

ಬೇಕು ಬೇಡಗಳು ಬರೆ ಹಾಕುತಿವೆ ದಿನನಿತ್ಯ

ನೂಕಿಬಿಡು ಸಾಗರಕೆ ಪರಮಾತ್ಮನೆ ||೨೬||


ಇಂದು ರಮೆ ಒಲಿದಿರಲು ನಿಶಿತಮತಿಯಾಗಿರಲು

ಹೊಂದುವೆನು ಎಲ್ಲವನು ಎನಬೇಡ  ಬಂಧು |

ಮುಂದೆ ಸುಖ ಪಡೆಯಲಿಕೆ ದಾನವನು ಮಾಡಿದವ

ಮಂದಮತಿ ತಾನಲ್ಲ ಪರಮಾತ್ಮನೆ  ||೨೭||


ಚಿಂತೆಯೇ ಚಿಗುರುವುದು ಬೆಳೆದು ಮರವಾಗುವುದು

ಕುಂತಿರಲು ಸುಮ್ಮನೇ ಸೋಮಾರಿ ಗಂಡು |

ಬಂತು ಮಂಡೆಯಲಿ ಬರೆ ದೆವ್ವಗಳ ಕಾರ್ಖಾನೆ

ಕಂತೆ ಕೆಲಸವ ನೀಡು ಪರಮಾತ್ಮನೆ ||೨೮||


ದೇಹದಣುಗಳ ಹಿಂಪಡೆವೆ ಬದಲಿಸುತ ನಿತ್ಯ 

ಮೋಹಗಳ ಹಿಂಪಡೆದು ಮೋಕ್ಷವನು ನೀಡು |

ದಾಹಗಳ ಹಿಂಪಡೆದು ನಿನ್ನ ದಾಸನ ಮಾಡು

ದೇಹಿ ಎನ್ನುವೆ ತಂದೆ ಪರಮಾತ್ಮನೆ ||೨೯||


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ ಆತುರವು ಬೇಡ

ಜೋಪಡಿಗೆ ಬೆಂಕಿ ಹಚ್ಚುವುದಾವ ಲಾಭಕ್ಕೆ

ಆಪತ್ತು ಬೇಡೆಮಗೆ ಪರಮಾತ್ಮನೆ ||೩೦||

 

ಮುಕ್ತಕಗಳು - ೨

ಅನ್ಯ ಭಾಷೆಯು ಬೇಕೆ ಕನ್ನಡವನುಲಿವಾಗ?

ಕನ್ಯೆ ಬೇಕೆನುವಾಭರಣದಲಂಕಾರ |

ವನ್ಯಜೀವಿಗೆ ಕಾಡು, ಕನ್ನಡವನೆನಗಿತ್ತೆ

ಧನ್ಯನಾಗಿಸಿ ನನ್ನ ಪರಮಾತ್ಮನೆ ||೬||


ಮುಕ್ತಕದ ಸೊಗಸುಗಳ ಮೆಚ್ಚದವರುಂಟೇನು?

ಶಕ್ತ ಚೌಕಟ್ಟಿನಲ್ಲನುಭಾವ  ಹೊಂದಿ |

ರಕ್ತಮಾಂಸಗಳಿರುವ ಜೀವಂತ ಗೊಂಬೆಯದು

ಭಕ್ತನಾಗಿಹೆ ನಾನು ಪರಮಾತ್ಮನೆ ||೭||


ಅಂದು ಗುಂಡಪ್ಪ ಕೈ ಹಿಡಿದ ಮುಕ್ತಕವನೇ

ಚೆಂದದಲಿ ಹೆಚ್ಚಾಯ್ತು ಮುಕ್ತಕದ ಪದ್ಯ |

ಇಂದು ಆ  ಕಗ್ಗವೇ ದಿಕ್ಸೂಚಿ  ಬದುಕಲಿಕೆ

ಸಂದೇಹ ಎಲ್ಲಿಹುದು ಪರಮಾತ್ಮನೆ ||೮|| 


ಮುಕ್ತಕವ ರಚಿಸಿದೊಡೆ ಮುತ್ತುಕಟ್ಟಿದೊಲಿರಲಿ

ಮುಕ್ತಕವನೋದಿದರೆ ತಲೆ ತೂಗಬೇಕು |

ಮುಕ್ತಕವು ಅಂತರಂಗಕೆ ಈಯೆ ಬೆಳಕನ್ನು

ಮುಕ್ತಮನ ಶರಣೆನಲಿ ಪರಮಾತ್ಮನೆ ||೯||


ಆಸೆಯಿದ್ದರೆ ಸಾಕೆ ದೇಹ ದಣಿಸಲುಬೇಕು

ವಾಸುದೇವನ ಕೃಪೆಯು ಜೊತೆಯಾಗಬೇಕು |

ಏಸು ನೀರಿನಲಿ ಮುಳುಗೇಳಬೇಕಿದೆ ಜಸಕೆ

ಕಾಸು ಕೊಟ್ಟರೆ ಕಡಲೆ ಪರಮಾತ್ಮನೆ  ||೧೦||